← ಶ್ರೀಕೃಷ್ಣ

ನಾರಾಯಣನು ನಾರಿಯಾದನು

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ನಾರಾಯಣನು ನಾರಿಯಾದನು
ನಾರಾಯಣನು ನಾರಿಯಾಗಲು ಉಗರು ಕಾಂತಿ ಪೋಗಿ
ವಾರಿಜಭವ ಮಾರರಿಪು ಮುಖ್ಯರ
ಸಾರಸುಂದರವ ತಿರಸ್ಕರಿಸೆ ಶೃಂಗಾರಸ ನಿಧೆ

ಸುರರಸುರ ಕರೆಸಿ ವೈರೆವ
ಮರೆಸಿ ಸ್ನೇಹದಿಂದಿರಿಸಿ ಈ ಕುಲ
ವರಿಸಿ ನಿಮ್ಮೊಳು ಬೆರಸಿ ಸುಖವಂಕುರಿಸುವಂತೆ ಸಂಚರಿಸೆಂದು
ಸರಸದಿಂದಲಾದರಿಸೆ ಸುರರ
ಧರಿಸಿ ಬಿಡದುದ್ಧರಿಸುವೆ ನಿದ್ರಿ
ತರಿಸಿ ದೈತ್ಯರ ವರಿಸೆಂದು
ಸರಸಿಜಾಂಬಕ ಹರಿ ಸಿರಿ ||1||

ದಿತಿಜಾದಿತಿ ಜ್ಯಾತ ತತಿಗಳನು ಸ
ಮ್ಮತ ಬಡಿಸಿ ಅಮೃತ ಬಪ್ಪದಕ್ಕೆ
ಹಿತವ ಪೇಳುವೆನೆಂದತಿಶಯದಿಂದ
ಚತುರಾತುಮ ಮಾರುತ ಪಿತಾ
ಕ್ಷಿತಿಯೊಳು ನೂರು ಶತ ಯೋಜನ ಪರ್ವತ ಮಂದಾರುಂಟು
ಜತೆಯಲಿ ಏಕಮತರಾಗಿ ಪೊಲ್
ಜಾತವ ಕಿತ್ತೆತ್ತಿಸಿತಾಬ್ಧಿಯೊಳು ಮಥಿಸೆಂದು ||2||

ಹರಿ ನಿರೂಪವ ಧರಿಸಿ ಎಲ್ಲರು
ಗಿರಿಯ ಬಳಿಗೆ ಹರಿದರಾಗಲೆ
ಕಿರಿ ಬೆರಳ ಅಬ್ಬರದಾಟವು ಬೊಬ್ಬಿರುವ ಧ್ವನಿ ಭೀಕರ
ಸಾರೀಗಧರ ಅಂಬರೆಂಟು ಕರಿ ಎರಡೈದು
ಶರಧಿ ಮಿಕ್ಕ ಗೋತುರ ಸಪ್ತದ್ವೀಪ
ತರು ಮೃಗಾದಿ ಜೀವರು ತಲ್ಲಣಿಸೆ
ಗಿರಿ ವೆಗ್ಗಳಿಪ ಭರಕಂದು||3||

ಸುತ್ತ ಈ ಪರಿಯಾಗುತ್ತಿರೆ ಇತ್ತ ಪ
ರ್ವತವಲ್ಲಾಡಿಸಿ ಕಿತ್ತಿ ತೆಗೆದೆತ್ತಿ
ಹೊತ್ತರಿತ್ತಂಡದಿ ಚಿತ್ತ ಮಾರ್ಗವನು ಹತ್ತಿ ಬರಲು ದೇವತೆಗಳು
ಹೊತ್ತರದ್ರಿಮೂಲ ಎತ್ತಲಾರದಲೆ
ತತ್ತಳಗೊಂಡು ಮಾರುತ್ತ ಅಡಿಗಡಿ
ಎತ್ತಿಡಲರಿದು ದೈತ್ಯರ ವಂಚಿಸಿ ಆ
ದಿತ್ಯರಿಗಿರಿಸಿದುತ್ತಮನೊ||4||

ವನಧಿsಯೊಳದ್ರಿ ದನುಜ ಮರರ ಗುಣವಿಳಹಿ ಸ
ರ್ಪನ ತಂದೀಗ ನೇಣನೆ ಮಾಡಿದರು
ಘಣ ಸುರರು ಬಾಲನು ದೈತ್ಯಯರು ಹೂಣಿಕೆಲಿ
ವಿನಯದಿಂದ ಮಥಿಸುವಾಗ
ವದನದನಿಲಕೆ ಅನಿಮಿಷರು ತಲ್ಲಣಿಸೆ
ಹರಿ ತನ್ನನು ನಂಬಿದವರ ಕಾಯಿದ ವಂಚನೆಯಿಂದ||5||

ಉಭಯ ಜನರು ಗಂಭೀರವಾದ ಕ್ಷೀರಾಂಬುಧಿ ಕಟವ
ರಭಸಗೈದು ಕಕುಭದಲಿ ಪ್ರತಿ ಶಬ್ದಪುಟ್ಟಿ ಉ
ದುಭವಿಸಿದವು ಶುಭಾ ಶುಭ
ಪ್ರಭು ಧನ್ವಂತ್ರಿ ಸುಲುಭ ರಸ ತಾರೆ
ವಿಭುದರೊಳಗೆ ಗಲಭೆಯ ಬೀಸಿ ಅ
ನಿಬರು ಒಯ್ಯಲು ಋಭುಜಾದ್ಯರು
ಅಬುಜಾಪ್ತ ಪೋದನಭವಾಗೆ||6||

ಹರಿ ತಿಳಿದ ಭಕ್ತರ ಮನೋಕ್ಲೇಶ
ಸಿರಿ ಸ್ತುತಿಗಗೋಚರನೆನ್ನಲು
ಧರಿಸಿ ಬಂದನು ಮಿರುಗುತಿಪ್ಪ ಸುಂ
ದರ ನಾರೀ ರೂಪ ಪರದೈವ
ಅರುಣ ಚರಣ ಬೆರಳುಂಗುರ ನೂಪುರ
ಕಡಗ ಕುಸುಮ ಪೊಂಗೆಜ್ಜೆಯ
ಸರಪಳಿಯ ಮೇಲೊಲಿವ ಕಾಂಚಿದಾಮ
ಶರತ್ಕಾಲದ ಚಂದಿರನಂತೆ||7||

ಸಣ್ಣವನಾರಾ ಮೋಹನ್ನಕರವು ಪಾ
ವನ್ನ ಕೌಸ್ತುಭ ರನ್ನ ವನಮಾಲೆ
ಚಿನ್ನದ ಸರ ಶೋಭನ ಕರಡಿಗೆ
ಚನ್ನಗೋಡಿ ಸರ ಬಣ್ಣ ಸರ
ರನ್ನದಪದಕ ಕನ್ನಡಿ ಮಲಕು
ಚನ್ನಪ ನ್ಯಾವಳ ಮುನ್ನೆ ಸರ್ವಹಾರ
ಭಿನ್ನಭಿನ್ನವಾಗಿನ್ನು ತೋರಲು ಸಂಪನನ್ನು ಅಪರಿಚ್ಛಿನ್ನ ಮೂರ್ತಿ ||8||

ಮುತ್ತಿನ ಚಿಂತಾಕ ಮುತ್ತಿನೋಲೆ ಜಾತ
ಮುತ್ತಿನ ಮೂಗುತಿ ಮುತ್ತಿನಕ್ಷತಿಯು
ಮುತ್ತಿನ ಸೂಸುಕಾ ಮುತ್ತಿನ ಜಡೆಯು
ಮುತ್ತಿನ ಗೊಂಚಲು ಮತ್ತೆ ತೋಳು
ಮುತ್ತು ಮೇಲಗೊಪ್ಪು ಕತ್ತಲೆ ಸೋಲಿಪ ಕಸ್ತೂರಿ ತಿಲಕಾ
ನೆತ್ತಿಯ ಬೈತಲು ಸುತ್ತ ತಳಪು ಸುರೋತ್ತಮ ಚಂದ್ರಮಾ
ನಿತ್ಯಾನಂದ ಪರುಷೋತ್ತಮನು ||9||

ನೀಲಗೂದಲು ಸುಫಲಾದಿ ಶ್ರವಣ ಭ್ರೂಲಾದಿಕವು ಚಂ
ಚಲ ನಯನ ಕಪೋಲ ನಾಸಿಕ ತಾಂಬುಲದ ವದನ
ನಾಲಿಗೆತಳ ವಿಶಾಲ ಭುಜ
ಮೇಲು ಕಂದರ ಸುಂಡಾಲಾಕಾರವಾದ
ತೋಳು ಕರತಳ ಪಾಲು ಬಪ್ಪ ಸ್ತನ
ಸ್ಥೂಲೋದರ ನಾಭಿ ಲೀಲಾ ನಡವು ಪಂ
ಚಳ ಊರು ಜಾನು ಲೋಲಾಡುತಾ ||10||

ಹರಡಿ ಕೈಕಟ್ಟು ಬೆರಳುಂಗುರವ
ವರ ಕಂಕಣಾದಿ ಸರಿಗೆ ತಾಯಿತ
ಸರ ಹುಲೆಯುಗರು ಎಣ್ಣೆ ನೂಲು
ತರುಳಹಾರ ಚೌರಿಯಿಂದ ಪರಿಪರಿ ಚಿತ್ರ ಬರೆದ ಕಂಚುಕಾ
ಸರಿಸರಿ ಬಂದಾಭರಣ ಧರಿಸಿ
ಅರೆ ಶರಗು ಗಹ್ವರದಿ ಮಾಡುತ್ತ
ಮರಿಯಾನೆ ಬಪ್ಪ ತೆರದಂತೆ ||11||

ಗಂಧ ಪಚ್ಚಿಕೊಂಡು ಒಂದು ಕರದೊಳು
ಗಂಧ ವಿಳ್ಯವು ಮತ್ತೊಂದು ಕರದೊಳು
ಕಂದುಕ ಪುಟಿಸುತ್ತೊಂದೊಂದು ಹೆಜ್ಚೆಯನು
ನಿಂದಲ್ಲಿ ನಿಲ್ಲದೆ ಚಂದದಿಂದ
ಬಂದಬಂದಂತೆ ಪೂ ಮಂದರಾದಿ ಮುಡಿಯಿಂದ ಉದರಲು
ಮಂದಹಾಸದಿಂದ ವೇಗ ನಡೆ ತಂದು ಸಮೀಪದಿ
ನಿಂದನು ಖಳರಿಗೊಂಡಿ ಮಾರಿ||12||

ದುರುಳ ಸಮೂಹ ಪರವಶನಾಗಿ ಬೆರಗಾಗಿ ನಿಲ್ಲೆ
ಕರೆದು ನಿಮ್ಮಯ ಪರಿ ಏನೆನಲು
ಇರದೆ ಪೇಳಲು ಶಿರವದೂಗುತ್ತಾತಾರವೆಂದ
ಭರ ಯೌವ್ವನ ಸ್ತ್ರೀ ಪರಪುರಷರ
ಸರಿತದಲ್ಲಿಗೆ ಚರಿಸಬಾರದು
ಎರಡು ಬಲದವರು
ಕರದಿ ಲೋಚನವ ಮುಚ್ಚಿ ಸಾಗಿರೆ ||13||

ಬಡಿಸೂವೆನೆ ಒಡನೆ ತಮ್ಮಯ
ಪಡೆ ಸಮ್ಮತ ಸಾಲ್ಹಿಡಿದು ಕುಳ್ಳಿರೆ
ನಡುವೆ ಪಿಯೂಷ ಪಿಡಿದು ದುಷ್ಟರ
ಕಡಿಗೊಂದು ಬಿಂದು ಬಡಿಸದೆ
ದೃಢ ಭಕ್ತರಿಗೆ ಕುಡಿಸುತ್ತಿರಲು
ಬಡ ರಾಹು ತಾನು ದುಡುಗಿ ಸುರರಾ
ಎಡೆಯೊಳಿರಲು ಕುಡಿತಿಯೊಳು ತಾ ಬಡಿಸಿ ಚಕ್ರವಾ ತುಡುಕಿದ||14||

ಓರ್ವನ ತರಿದು ಈರ್ವಗೆ ಮಾಡಿದ
ಊರ್ವಿಗೆ ಕೆಡಹಿ ಗರ್ವ ಮುರಿದು
ಸರ್ವಬಗೆಯಿಂದ ನಿರ್ವಾಹ ಕರ್ತನು
ಓರ್ವನಲ್ಲದೆ ಮತ್ತೋರ್ವನಾರೊ
ನಿರ್ವಿಣ್ಣರಾಗಿದ್ದ ಗೀರ್ವಾಣ ಜನರ
ನಿರ್ವಾಧಿಕವೊಹಿಸಿ ಪರ್ವತೆಡೆಯಿದ್ದ ದು
ರ್ವಿಷಯಾಬ್ಧಿಗೆ ಚೀರ್ವನಾಗಿದ್ದ ವಿಜಯವಿಠ್ಠಲ ನಿರ್ವಾಣೇಶ||15||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.