← ಶ್ರೀಕೃಷ್ಣ

ಪಾಪೇಂದ್ರಿಯಗಳಿಗೆರಗಿ ಪರಹಿತಾರ್ಥವ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಪಾಪೇಂದ್ರಿಯಗಳಿಗೆರಗಿ ಪರಹಿತಾರ್ಥವ ಮರೆದು
ವ್ಯಾಪಾರ ವಿಷಯಂಗಳಲ್ಲಿರೆ ಯಮನೊಯ್ದು
ಕೋಪಾಟೋಪದಲಿಂದ ದಂಡಿಸಿ ತಮಸಿನ
ಕೂಪದಲ್ಲಿ ಹಾಕದಲೆ ಬಿಡುವನೆ ಮರುಳೆ

ಉಡಿಗೆ ತೊಡಿಗೆ ಇಡಲು ಮಡದಿಯಳ ಮುಖ ನೋಡಿ
ಕಡು ಹಿಗ್ಗಿ ಹುಗ್ಗಿ ಪಡಗದಂತೆ ಹಿರ್ರನೆ
ಪಿಡಿದು ಗಲ್ಲವ ಮುಟ್ಟಿ ಮುಡಿಗೆ ಮುಡಿವಾಳವನು
ತಡಿಯದಲೆ ಮುಡಿಸುತ್ತಲಿ
ಕುಡಿತೆಗಂಗಳಾ ಸವಿನುಡಿಗಳ ಕಕ್ಕಸ ಕುಚ
ವಡನೊಡನೆ ನೋಡಿ ಸುಖಬಡುತಾ
ಬಡನಡುವಿಗೆ ತೊಡಿಗೆ ಕಿರ್ದೊಡೆಗೊಲಿದು
ಬಿಡದೆ ಕಾಳ್ಯಾಡುವುದು
ಸುಡುಸುಡು ಮಾಡಿದರಿನ್ನಾವ ಗತಿ ಮರುಳೇ ||1||

ನೆಂಟರು ಮನೆಗೆ ಬರಲು ವಂಟಿಯಂತೆ ಮೊಗವ
ಸೊಂಟ ಮಾಡಿಕೊಂಡು ಕಂಠವನು ತರ್ಕೈಸಿ
ಕುಂಟವಾರ್ತೆಯ ಕೇಳಿ ಬಂಟನು ನಾನೆಂದು
ತೊಂಟತನ ಬಗೆ ತೋರುತಾ
ಉಂಟಾದ ಗೋಧಿಯ ಸೊಂಟೆ ಬೆಲ್ಲನು ತಂದು
ಹೆಂಟಿಯಂತೆ ಹದಿನೆಂಟು ಕಡುಬನೆ ಕೊರಿಸಿ
ವಂಟಿಲಿ ಕುಳಿತು ಸುಂಡಿಗೆಯನ್ನು ಚಾಚುತ್ತಾ
ಎಂಟು ಮಡಿಸದೆ ವಾರ್ತಿ ಪೇಳುತಲಿ ಮರುಳೇ ||2||
ಇಂದು ನಮ್ಮನೆ ಪ್ರಸ್ತವೆಂದು ಆರಾದರೂ
ಬಂದು ಪೇಳಲು ಊರ ಹಂದಿಯಂತೆ ಕಾಯಿದು
ಒಂದು ಕಾಳು ತಿನದೆ ಸಂದಿಗೊಂದಿ ಸುತ್ತಿ
ಸಂಧ್ಯಾಕಾಲ ವಾನರಾಗುತ್ತ
ಚಂದದಿಂದ್ಯುಕ್ತಿಯೊಳು ದ್ವಂದ್ವದಲಿ ಕುಳಿತಿವರು
ತಂದೆ ತಾಯಿ ಕಡೆ ಬಂಧುಬಳಗವೆಂದೂ
ಒಂದಿಷ್ಟು ಕಡಿಮೆ ತಿನ್ನದೆ ಪರರ ಒಡವೆಯನು
ತಿಂದು ಡರ್ರನೆ ತೇಗಿ ನಸುವ ನಗುವ ಮರುಳೇ||3||

ನಾಡಾಡಿ ಚಾಡಿ ಮಾತಾಡಬೇಕಾದರೆ
ಖೋಡಿ ನಾಲಿಗೆ ದೊಡತಾಗಿ ಬಾಹಿನೀ
ನಿಡಿ ಲಟಲಟವೆನುತಾ ಕೋಡಗದಂತೆ ಕುಳಿತು
ಹೇಡಿ ಪರನಿಂದೆಗಳಿಗೆ ಬಾಡದಲೆ ಬತ್ತದಲೆ
ಮಾಡಿದ ಮಹಾಪುಣ್ಯ ಕಾಡಿಗೊಪ್ಪಿಸಿ ಕೊಟ್ಟ
ಮೂಢ ಗಾರ್ಧಬನಂತೆ ಓಡಾಡಿ ಬಳಲಿ
ನಾಡಾಡಿ ಸುದ್ದಿಗಳಿಗೆ ಬಿಡಿ
ಬಿಡಿಂದಾ ತಿರುಗುವಾ ಹೀನ ಮರುಳೇ ||4||

ಸಂಸಾರವೆಂಬಾ ಸಾರಾ ಸಾಗರ ಮಧ್ಯ
ಹಿಂಸನಾಗದೆ ಬಿಟ್ಟು ಇದರಂತೆ ಭಕುತಿ ಮರು
ದಂಶ ಗುರು ಮಧ್ವಮುನಿರನ್ನನಾ ಶ್ರೀ ಚರಣ
ಸಂಶಯವಿಲ್ಲದಲೆ ನಂಬಿ
ಸಂಸಾರ ಉತ್ತರಿಸು ಸಂದೇಹ ಇದಕಿಲ್ಲ
ಕಂಸಾಸುರನ ಪ್ರಾಣಹರ ಎನ್ನ ಮನಸ್ಸಾ
ಹಂಸ ಶ್ರೀ ವಿಜಯವಿಠ್ಠಲನ್ನ ಪಾದದಾ
ಪಾಂಶವೊ ಮಾಡಿ ಗತಿಯಲಿ ಬಾಳು ಮರುಳೇ||5||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.