← ಶ್ರೀಕೃಷ್ಣ

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ

📂 ಶ್ರೀಕೃಷ್ಣ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಅಢಾಣಾ
🥁 ತಾಳ: ಝಂಪೆತಾಳ
ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ
ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ ॥

ಪರಮಪದದೊಳಗೆ ವಿಷಧರನ ತಲ್ಪದಲಿ ನೀ
ಸಿರಿ ಸಹಿತ ಕ್ಲೀರವಾರಿಧಿಯೊಳಿರಲು
ಕರಿರಾಜ ಕಷ್ಟದಲಿ ಆದಿಮೂಲ ಎಂದು
ಕರೆಯಲಾಕ್ಷಣ ಬಂದು ಒದಗಿದೆಯೊ ನರಹರಿಯೇ ॥

ಕಡುಕೋಪದಿಂ ಖಳನು ಖಡ್ಗವನೆ ಪಿಡಿದು ನಿ
ನ್ನೊಡೆಯನೆಲ್ಲಿಹನೆಂದು ನುಡಿಯೆ
ದೃಢಭಕುತಿಯಲಿ ಶಿಶುವು ಬಿಡನೆ ನಿನ್ನನು ಭಜಿಸೆ
ಸಡಗರದಿ ಸ್ತಂಭದಿಂದೊಡೆದೆ ನರಹರಿಯೇ ॥

ಯಮಸುತನ ರಾಣಿಗಕ್ಷಯವಸನವನಿತ್ತೆ
ಸಮಯದಲಿ ಅಜಮಿಳನ ಪೊರೆದೆ
ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ
ಕಮಲಾಕ್ಷ ಕಾಗಿನೆಲೆಯಾದಿ ಕೇಶವನೇ ॥
← ಶ್ರೀಕೃಷ್ಣ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.