← ಶ್ರೀಕೃಷ್ಣ

ಕಣಿಯ ಹೇಳಲು ಬಂದೆ ನಾರಾಯಣನಲ್ಲದೆ

📂 ಶ್ರೀಕೃಷ್ಣ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಆರಭಿ
🥁 ತಾಳ: ಆದಿತಾಳ
ಕಣಿಯ ಹೇಳಲು ಬಂದೆ ನಾರಾಯಣನಲ್ಲದೆ ಇಲ್ಲವೆಂದು- ಮಿಕ್ಕ
ಬಣಗು ದೈವದ ಗೊಡವೆ ಬೇಡ ನರಕ ತಪ್ಪದು ||ಪ||

ಎಕ್ಕನಾತಿಯರು ಕಾಟಿ ಜಕ್ಕಿ ಜಲಕನ್ಯೆಯರು
ಸೊಕ್ಕಿನಿಂದ ಸೊಂಟ ಮುರುಕ ಬೈರೇದೇವರು
ಮಿಕ್ಕ ಮಾರಿ ಮಸಣಿ ಚೌಡಿ ಮೈಲಾರಿ ಮೊದಲಾದ
ಠಕ್ಕು ದೈವದ ಗೊಡವೆ ಬೇಡ ನರಕ ತಪ್ಪದು ||1||

ಸುತ್ತಣವರ ಮಾತ ಕೇಳಿ ಗುತ್ತಿಯ ಎಲ್ಲಮ್ಮಗೊಲಿದು
ಬತ್ತಲೆಯೆ ದೇವರೆದುರು ಬರುವುದು ನೋಡಿರೊ
ಮತ್ತೆ ಬೇವಿನುಡಿಗೆಯ ಅರ್ತಿಯಿಂದುಟುಗೊಂಡು
ಮುಕ್ತಿ ಕಾಂಬೆವೆಂಬ ಮೌಢ್ಯ ಬೇಡಿರೊ ||2||

ತೂಳದವರ ಮಾತ ಕೇಳಿ ಖೂಳರೆಲ್ಲ ಕೂಡಿಕೊಂಡು
ಹಾಳು ಮಾಡಿ ಕೈಯಲ್ಲಿದ್ದ ಹೊನ್ನು ಹಣಗಳ
ಬಾಳುತಿಪ್ಪ ಕೋಣ ಕುರಿಯ ಏಳ ಬೀಳ ಕೊರಳ ಕೊಯ್ದು
ಬೀಳ ಬೇಡಿ ನರಕಕೆಂದು ಹೇಳ ಬಂದೆನೊ ||3||

ಹೊಳ್ಳದ ಬಿಚ್ಚೇರು ಸಹಿತ ಸುಳ್ಳರೆಲ್ಲ ಕೂಡಿಕೊಂಡು
ಬೆಳ್ಳನ ಬೆಳತನಕ ನೀರ ತಡಿಯಲಿ ಕುಳಿತು
ಗುಳ್ಳೆ ಗೊರಜೆ ಕೂಡಿ ತಿಂದು ಕಳ್ಳುಕೊಡನ ಬರಿದು ಮಾಡುವಂಥ
ಪೊಳ್ಳುದೈವದ ಗೊಡವೆ ಬೇಡ ನರಕ ತಪ್ಪದು ||4||

ಪೊಡವಿಗಧಿಕ ವಿಜಯನಗರದೊಡೆಯ ಕಟ್ಟೆ ವೆಂಕಟೇಶ
ಕಡು ಚೆಲ್ವ ಕಟ್ಟಾಣಿ ಕನಕನೊಡೆಯ
ಬಡದಾದಿ ಕೇಶವನ ಪಾದ ಬಿಡದೆ ಭಜಿಸಿರೊ
ಜಡದೈವಗಳ ಇಂಥ ಪೂಜೆ ಬೇಡ ಕಾಣಿರೋ ||5||
← ಶ್ರೀಕೃಷ್ಣ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.