← ಶ್ರೀಕೃಷ್ಣ

ತಿಳಿಯ ಬರದೆಲೆ ಮನವೆ

📂 ಶ್ರೀಕೃಷ್ಣ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಮುಖಾರಿ
🥁 ತಾಳ: ಆಟತಾಳ
ತಿಳಿಯ ಬರದೆಲೆ ಮನವೆ, ತೀರ್ಥ ಯಾತ್ರೆಯ ಫಲವು ||ಪ||
ಸುಲಭದಲಿ ಸದ್ಗತಿಯ ಸೂರೆಗೊಂಬುವರಿಗಲ್ಲದೆ ||ಅ||

ನೂರೆಂಟು ತಿರುಪತಿಯ ಯಾತ್ರೆಯನು ನಾನೊಲ್ಲೆ
ವಾರದೊಂದ್ಹೊತ್ತು ಉಪವಾಸವನು ನಾನೊಲ್ಲೆ
ಸಾರ ರೇಣುವೆಯುಂಡು ಕಡೆಯ ಬಾಗಿಲ ಕಾಯ್ವ
ನೀರ ಗೌಡಿಯ ಮಗನ ಮಗನ ಮಗನೆನಿಸೆನ್ನ ||1||

ಪಂಚಾನ್ನ ಪರಮಾನ್ನವಾವುದನು ನಾನೊಲ್ಲೆ
ಚಂಚಲಗೊಳಿಸುವ ಭೋಗ ಭಾಗ್ಯವ ನಾನೊಲ್ಲೆ
ಹಿಂಚದೆ ದಾಸೋಹ ಮಾಳ್ಪವರ ಮನೆಯ ಕಾಯ್ವ
ಉಂಚ ಗೌಡಿಯ ಮಗನ ಮಗನ ಮಗನೆನಿಸೆನ್ನ ||2||

ಪಟ್ಟೆ ಪಟ್ಟಾವಳಿ ದುಕೂಲವನು ನಾನೊಲ್ಲೆ
ಪಟ್ಟೆ ನಾಮದ ಬರಿಯ ಪ್ರದರ್ಶನ ನಾನೊಲ್ಲೆ
ಸೃಷ್ಟಿಯೊಳು ನಿನ್ನ ಭಜಿಪ ಭಕ್ತರ ಮನೆ ಕಾಯ್ವ
ಮುಟ್ಟುಗೌಡಿಯ ಮಗನ ಮಗನ ಮಗನೆನಿಸೆನ್ನ ||3||

ಮುತ್ತಿನಾಭರಣ ತಾಳಿ ಪದಕವ ನಾನೊಲ್ಲೆ
ಸತ್ತಿಗೆಯ ನೆರಳಿನಲಿ ಸಾಗುವುದ ನಾನೊಲ್ಲೆ
ನಿತ್ಯ ನಿನ್ನ ನೆನೆವರ ಮನೆಯ ಬಾಗಿಲ ಕಾಯ್ವ
ತೊತ್ತುಗೌಡಿಯ ಮಗನ ಮಗನ ಮಗನೆನಿಸೆನ್ನ ||4||

ಆಶೆ ಪಾಶಗಳೆಂಬ ಜಂಜಾಟ ನಾನೊಲ್ಲೆ
ದೇಶಾನುದೇಶಗಳ ತಿರುಗಾಟ ನಾನೊಲ್ಲೆ
ಶ್ರೀಶಾದಿಕೇಶವನ ಭಜಿಪರ ಮನೆಯ ಕಾಯ್ವ
ಕಸಗೌಡಿಯ ಮಗನ ಮಗನ ಮಗನೆನಿಸೆನ್ನ ||5||
← ಶ್ರೀಕೃಷ್ಣ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.