← ಶ್ರೀಕೃಷ್ಣ

ಸಾಧು ಸಜ್ಜನ ಸತ್ಯಗುಣಕಿದಿರುಂಟೆ

📂 ಶ್ರೀಕೃಷ್ಣ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಭೈರವೀ
🥁 ತಾಳ: ತ್ರಿಪುಟತಾಳ
ಸಾಧು ಸಜ್ಜನ ಸತ್ಯಗುಣಕಿದಿರುಂಟೆ
ಆದಿಕೇಶವನ ಪೋಲುವ ದೈವವುಂಟೆ ||ಪ||

ಸತ್ಯವ್ರತವುಳ್ಳವಗೆ ಮೃತ್ಯು ಭಯವುಂಟೆ
ಚಿತ್ತಶುದ್ಧಿಯಿಲ್ಲದವಗೆ ಪರಲೋಕವುಂಟೆ
ವಿತ್ತವನರಸುವಂಗೆ ಮುಕ್ತಿಯೆಂಬುದುಂಟೆ
ಉತ್ತಮರ ಸಂಗಕಿಂತಧಿಕ ಧರ್ಮವುಂಟೆ ||1||

ಸುತಲಾಭಕಿಂತಧಿಕ ಲಾಭವುಂಟೆ
ಮತಿರಹಿತನೊಳು ಚತುರತೆಯುಂಟೆ
ಪತಿಸೇವೆಗಿಂತಧಿಕ ಸೇವೆಯುಂಟೆ
ಸತಿಯಿಲ್ಲದವಗೆ ಸಂಪದವೆಂಬುದುಂಟೆ ||2||

ಪಿಸುಣಗಿನ್ನಧಿಕ ಹೀನನುಂಟೆ
ವಸುಧೆಯೊಳನ್ನದಾನಕೆ ಸರಿಯುಂಟೆ
ಅಶನವ ತೊರೆದ ಯೋಗಿಗೆ ಭಯವುಂಟೆ
ವ್ಯಸನಿಯಾದ ನೃಪನಿಗೆ ಸುಖವುಂಟೆ ||3||

ಧನಲೋಭಿಗಿನ್ನಧಿಕ ಹೀನನುಂಟೆ
ಮನವಂಚಕ ಕಪಟಿಗೆ ನೀತಿಯುಂಟೆ
ಸನುಮಾನಿಸುವ ಒಡೆಯಗೆ ಬಡತನವುಂಟೆ
ವಿನಯವಾಗಿಹ ಸಂಗದೊಳು ಭಂಗವುಂಟೆ ||4||

ಹರಿಭಕ್ತಿಯಿಲ್ಲದವಗೆ ಪರಲೋಕವುಂಟೆ
ಪರಮ ಸಾತ್ತ್ವಿಕ ಗುಣಕೆ ಪಿರಿದುಂಟೆ
ಪರನಿಂದೆಗಿಂತಧಿಕ ಪಾತಕವುಂಟೆ
ವರದಾದಿಕೇಶವನಲ್ಲದೆ ದೈವವುಂಟೆ ||5||
← ಶ್ರೀಕೃಷ್ಣ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.