← ಶ್ರೀಕೃಷ್ಣ

ಚಿರಂಜೀವಿಯಾಗಿರೆಲೊ ಚಿಣ್ಣ ನೀನು

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಚಿರಂಜೀವಿಯಾಗಿರೆಲೊ ಚಿಣ್ಣ ನೀನು
ಪರಮ ಭಾಗವತರ ಪದಧೂಳಿ ಧರಿಸುತಲಿ

ಜರಿಯಬೇಡ ಹರಿಯ ಮರೆಯಬೇಡೆಂದೆಂದು
ತಿರಿಯಬೇಡ ಖಳರ ಮನೆಗೆ ಪೋಗಿ
ಜರೆಯಬೇಡನ್ಯರಿಗೆ ರಹಸ್ಯ ತತ್ತ್ವಗಳನ್ನು
ಬೆರೆಯಬೇಡ ಪರರ ಸತಿಯ ಸ್ವಪ್ನದಲೂ ||1||

ಲೋಕವಾರ್ತೆಯ ನಿನ್ನ ಕಿವಿಗೆ ಕೇಳಿಸಬೇಡ
ಶ್ರೀ ಕಾಂತ ಚರಿತೆಯನು ಕೇಳದಿರಬೇಡ
ಪಾಕವನು ಮಾಡಿ ಏಕಾಂಗಿಯಾಗುಣಬೇಡ
ಭೂಕಾಂತರನುಸರಿಸಿ ಬೆಸಗೊಳ್ಳಬೇಡ ||2||

ಸಾಲ ಮಾಡಲಿ ಬೇಡ ಸಾಲದೆಂದೆನಬೇಡ
ನಾಳೆಗೆ ಹ್ಯಾಗೆಂಬ ಚಿಂತೆ ಬೇಡ
ಖೂಳ ಜನರೊಡಗೂಡಿ ಕಂಗೆಡಲಿ ಬೇಡ ನೀ
ಬಾಳುವರ ಸಂಗದಲಿ ಬಾಳೆಲವೊ ಬಾಲ ||3||

ಪಂಡಿತರು ಪಾಮರರು ಆರಿಗಾದರೂ ನಿನ್ನ
ಕಂಡವರಿಗೆಲ್ಲ ಕೌತುಕ ತೋರಲಿ
ಹೆಂಡಿರು ಮಕ್ಕಳು ಅಳಿಯ ಸೊಸೆ ಮೊಮ್ಮಕ್ಕಳು
ಉಂಡುಟ್ಟು ದ್ವಿಜರ ಸಹ ಗಂಡುಗಲಿಯಾಗೋ ||4||

ಮಂದಮತಿಗಳ ಕೂಡೆ ಮಾತಾಡಲಿ ಬೇಡ
ನಿಂದಕರ ಕಣ್ಣೆತ್ತಿ ನೋಡಬೇಡ
ಇಂದಿರೆಯರಸ ಶ್ರೀ ವಿಜಯವಿಠ್ಠಲನ ಚರಣ
ದ್ವಂದ್ವದಲಿ ಮಸ್ತಕವ ನೀಡದಿರಬೇಡ||5||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.